ಬೆಂಗಳೂರು –
ಶಾಲಾ ಕೊಠಡಿ ಕೇಳಿದ ಶಿಕ್ಷಕನ ಅಮಾನತಿಗೆ ಭಾರೀ ಆಕ್ರೋಶ: ಆದೇಶ ಹಿಂಪಡೆಯಲು ಸಿಎಂಗೆ ಸಾಹಿತಿಗಳ ಪತ್ರ
ಗಳೂರು: ಶಾಲಾ ಕೊಠಡಿ ಮಂಜೂರಾತಿಗೆ ಪ್ರತಿಭಟನೆ ನಡೆಸಿದ ಬೆಳಗಾವಿ ಜಿಲ್ಲೆ ನಿಡಗುಂದಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಅವರನ್ನು ಅಮಾನತು ಮಾಡಿರುವ ಶಿಕ್ಷಣ ಇಲಾಖೆ ನಡೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಸರ್ಕಾರ ಕೂಡಲೇ ಅಮಾನತು ಆದೇಶ ಹಿಂಪಡೆಯಬೇಕೆಂದು ಆಗ್ರಹಿಸಲಾಗಿದೆ.ಸಾಹಿತಿಗಳಾದ ಡಾ. ಕೆ. ಮರುಳಸಿದ್ದಪ್ಪ, ಎಸ್.ಜಿ. ಸಿದ್ದರಾಮಯ್ಯ, ಡಾ. ವಸುಂಧರಾ ಭೂಪತಿ, ಮಾವಳ್ಳಿ ಶಂಕರ್ ಸೇರಿದಂತೆ ನಾಡಿನ ಸಾಹಿತಿಗಳು, ಶಿಕ್ಷಣ ತಜ್ಞರು, ಲೇಖಕರು, ಹೋರಾಟಗಾರರು, ಖಾಸಗಿ ಶಾಲಾ ಸಂಘಟನೆಗಳು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದು ಶಿಕ್ಷಕ ವೀರಣ್ಣರ ಅಮಾನತು ಕ್ರಮವನ್ನು ಖಂಡಿಸಿದ್ದು, ಅಮಾನತು ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಶಾಲೆಯ ಶಿಕ್ಷಕ ವೀರಣ್ಣ ಅವರು ಶಾಲಾ ಕೊಠಡಿಗಳ ಮಂಜೂರಾತಿಗೆ ನಡೆಸಿದ ಪ್ರತಿಭಟನೆ ಅವರ ಶಾಲೆಯ ಸಮಸ್ಯೆಯಷ್ಟೇ ಅಲ್ಲ. ಲಕ್ಷಾಂತರ ನಿಷ್ಠಾವಂತ ಶಿಕ್ಷಕರ ಧ್ವನಿಯಾಗಿದೆ. ಶಿಕ್ಷಕರ ಸಂಘದ ನಾಯಕರು ಕೂಡ ಅನೇಕ ಸಲ ಇದೇ ವಿಷಯದ ಬಗ್ಗೆ ಧ್ವನಿಯೆತ್ತಿದ್ದಾರೆ. ಆದರೆ ಬಹುಪಾಲು ಶಿಕ್ಷಕರು ನೀತಿ ಸಂಹಿತೆ, ಶಿಸ್ತು ಕ್ರಮದ ಭೀತಿಯಿಂದ ಸುಮ್ಮನಾಗಿದ್ದಾರೆ. ಅಮಾನತುಗೊಂಡ ಶಿಕ್ಷಕನ ವಿರುದ್ಧ ಕ್ರಮವನ್ನು ಪುನರ್ ಪರಿಶೀಲಿಸಿ ಗೌರವ ಪೂರ್ವಕವಾಗಿ ಮರಳಿ ಸೇವೆಗೆ ಕರೆ ತರಬೇಕು ಎಂದು ಮನವಿ ಮಾಡಲಾಗಿದೆ.