ಬೆಂಗಳೂರು –
ಪ್ರಸಕ್ತ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಮೇ 15ರಿಂದ ಜೂನ್ 14ರ ವರೆಗೆ ಕೈಗೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದ್ದು ಕಾರ್ಯನಿರತ ವೃಂದಬಲದ ಶೇ. 6ನ್ನು ಮೀರದಂತೆ ವರ್ಗಾವಣೆ ನಡೆಸಲು ಮಾರ್ಗಸೂಚಿ ಹೊರಡಿಸಿದೆ. ವರ್ಗಾವಣೆ ವೇಳೆ ಪ್ರತಿಯೊಬ್ಬ ನೌಕ ರರಿಗೂ ಸ್ಥಳ ನಿಯುಕ್ತಿ ನೀಡಬೇಕು.ಅದಕ್ಕಾಗಿ ಕಾಯುವಂತಾಗಬಾ ರದು. ಇದರಿಂದ ಸರಕಾರಕ್ಕೆ ಅನಾವಶ್ಯಕ ಆರ್ಥಿಕ ಹೊರೆ ಆಗಲಿದೆ ಎಂಬುದನ್ನು ಮಾರ್ಗಸೂಚಿ ಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಒಂದು ವೇಳೆ ಗಂಭೀರ ಸ್ವರೂಪದ ಆರೋಪಗಳಿದ್ದು, ಇಲಾಖಾ ವಿಚಾರಣೆ ಅಥವಾ ಯಾವುದೇ ತನಿಖೆ ನಡೆಯುತ್ತಿದ್ದರೆ ಅಂತಹವರನ್ನು ಆರೋಪಕ್ಕೆ ಸಂಬಂಧಿ ಸಿದ ತನಿಖೆ ಅಥವಾ ಇಲಾಖಾ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವ ಹುದ್ದೆಗಳಿಗೆ ನೇಮಿಸುವಂತಿಲ್ಲ ಎಂದು ಹೇಳಿದೆ.
ಅದೇ ರೀತಿ ಹಿಂದೆ ವರ್ಗಾವಣೆ ಯಾಗಿರುವ ಸ್ಥಳದಲ್ಲಿ ಎ ಮತ್ತು ಬಿ ದರ್ಜೆ ಅಧಿಕಾರಿ 2 ವರ್ಷ ಪೂರೈಸಿಲ್ಲ ಎಂದಾದರೆ ಬೇರೆ ಸ್ಥಳಕ್ಕೆ ವರ್ಗಾ ಯಿಸುವ ಅಗತ್ಯವಿಲ್ಲ. ಅಂತೆಯೇ 4 ವರ್ಷ ಪೂರೈಸದ ಸಿ ದರ್ಜೆ ನೌಕರ ಮತ್ತು 7 ವರ್ಷ ಪೂರ್ಣಗೊಳಿಸದ ಡಿ ದರ್ಜೆ ನೌಕರರ ವರ್ಗಾವಣೆಯೂ ಬೇಡ ಎಂಬುದನ್ನು ಮಾರ್ಗ ಸೂಚಿ ಯಲ್ಲಿ ಸ್ಪಷ್ಟಪಡಿಸಲಾಗಿದೆ.
2 ವರ್ಷದೊಳಗೆ ನಿವೃತ್ತಿ ಆಗುವ ನೌಕರರನ್ನೂ ವರ್ಗಾಯಿಸಬೇಕೆಂದಿಲ್ಲ. ಕೇಂದ್ರ ಸರಕಾರದ ಪ್ರಮುಖ ಯೋಜನೆಗಳ ಅನುಷ್ಠಾನ ಮುಖ್ಯ ಹಂತದಲ್ಲಿದ್ದರೆ ವರ್ಗಾವಣೆ ಬೇಡ. ಅಂಗವಿಕಲ ನೌಕರರಿಗೆ ನಿಯತ ಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಬೇಕು ಎಂದೂ ಉಲ್ಲೇಖೀಸಿದೆ.
ಇಎಸ್ಆರ್ ಅನುಷ್ಠಾನಕ್ಕೆ ಸಿಎಸ್ ಅತೃಪ್ತಿ
ರಾಜ್ಯ ಸರಕಾರದ ಎಲ್ಲ ಅಧಿಕಾರಿ, ನೌಕರರ ಸೇವಾ ವಿವರಗಳನ್ನು ಎಚ್ಆರ್ಎಂಎಸ್ ತಂತ್ರಾಂಶದ ವಿದ್ಯುನ್ಮಾನ ಸೇವಾ ವಹಿ (ಇಎಸ್ಆರ್) ರೂಪದಲ್ಲಿ ದಾಖಲಿಸಿ ನಿರ್ವಹಿಸುವಲ್ಲಿ ತಡ ಆಗುತ್ತಿರುವುದಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಅವರು, ಇಎಸ್ಆರ್ ಅನುಷ್ಠಾನ ಮಾಡಲು ಇಲಾಖಾ ಮುಖ್ಯಸ್ಥರು, ಕಚೇರಿ ಮುಖ್ಯಸ್ಥರು, ಡಿಡಿಒಗಳಿಗೆ ತರಬೇತಿ ಕೊಡಲಾಗಿದೆ. ಆದರೆ, ಇಎಸ್ಆರ್ ಅನು ಷ್ಠಾನದ ಪ್ರಗತಿ ತೃಪ್ತಿಕರವಾಗಿಲ್ಲ. ಅನುಷ್ಠಾನ ಶೀಘ್ರ ಮಾಡಿ ಎಂದು ಸೂಚಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……