ಏಳು PDO ಗಳ ಅಮಾನತು – ವಸತಿ ಯೋಜನೆಯಡಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

Suddi Sante Desk

ಬೀದರ್ –

ಉಪ್ಪು ತಿಂದ‌ ಮೇಲೆ‌ನೀರು ಕುಡಿಯಲೇ ಬೇಕು.ತಪ್ಪು‌ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು.ಹೌದು ಕಳೆದ ಒಂದು‌ ವರ್ಷಗಳಿಂದ ವಿವಿಧ ವಸತಿ ಯೋಜನೆಯಡಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಒಂದು ಹಂತದ ತನಿಖೆಯಲ್ಲಿ ಬರೋಬ್ಬರಿ 7 ಜನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಮಾನತು ಆಗಿದ್ದಾರೆ. ಕರ್ತವ್ಯ ಲೋಪದ ಹಿನ್ನೆಲೆ 7 ಪಿಡಿಓ ಗಳನ್ನು ಅಮಾನತು ಮಾಡಿ ಬೀದರ್ ನಲ್ಲಿ ಆದೇಶ ಮಾಡಲಾಗಿದೆ. ಬೀದರ್ ಜಿಲ್ಲಾ ಪಂಚಾಯತ್ ಸಿಇಒ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಹೌದು ಕರ್ನಾಟಕದ ಮುಕುಟ ಗಡಿನಾಡು ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ವಿವಿಧ ವಸತಿ ಯೋಜನೆಗಳಡಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು.

2015-16 ರಿಂದ 2018-19 ರವರೆಗೆ . ಭಾಲ್ಕಿ ಪಟ್ಟಣದಲ್ಲಿ ವಿವಿಧ ವಸತಿ ಯೋಜನೆಗಳಡಿ ಅರ್ಹತೆ ಹೊಂದಿಲ್ಲದಿದ್ದರೂ ಸಹ ವಾಮ ಮಾರ್ಗದ ಮುಖಾಂತರ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅನರ್ಹರಿಗೆ ಮನೆ ಹಂಚಿಕೆ ಮಾಡಲಾಗಿದೆ ಎನ್ನುವ ಆರೋಪ ಹಿನ್ನಲೆಯಲ್ಲಿ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೋರೆಷನ್ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಮೇಲ್ನೋಟಕ್ಕೆ ಪಿಡಿಓ ಅಧಿಕಾರಿಗಳು ವಾಮ ಮಾರ್ಗದ ಮೂಲಕ ಉಳ್ಳವರಿಗೆ ಮನೆಹಂಚಿಕೆ ನೀಡಿದ್ದಾರೆ ಎನ್ನುವುದು ಸಾಬಿತಾಗಿದೆ.ಹೀಗಾಗಿ ಭಾಲ್ಕಿ ತಾಲೂಕಿನ 7 ಜನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಗ್ಯಾನೆಂದ್ರಕುಮಾರ್ ಗಂಗ್ವಾರ್ ಆದೇಶ ಹೊರಡಿಸಿದ್ದಾರೆ.

203 ಫಲಾನುಭವಿಗಳಿಂದ ವಸೂಲಾತಿಗೆ ನೋಟೀಸ್ ಜಾರಿ ಮಾಡಲಾಗಿತ್ತು.ಬರೋಬ್ಬರಿ 79 ಕೋಟಿ ಸರ್ಕಾರದ ಹಣ ದುರುಪಯೋಗ ಕೇಳಿ ಬಂದಿತ್ತು.ಕೆಪಿಸಿಸಿ ಕಾರ್ಯಾದ್ಯಕ್ಷ ಈಶ್ವರ್ ಖಂಡ್ರೆ ಕ್ಷೇತ್ರದಲ್ಲಿ ವಿವಿಧ ವಸತಿ ಯೋಜನೆಗಳ ಮನೆ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಅಕ್ರಮ ವೆಸಗಿದ್ದಾರೆ ಎಂದು ಬೀದರ್ ಸಂಸದ ಭಗವಂತ್ ಖೊಬಾ ಈಶ್ವರ್ ಖಂಡ್ರೆ ವಿರುದ್ದ ಆರೋಪ ಮಾಡುತ್ತಲೆ ಬಂದಿದ್ದರು. ಮನೆಹಂಚಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಎನ್ನುವ ಕುರಿತು ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಗ್ಯಾನೆಂದ್ರಕುಮಾರ್ ಗಂಗ್ವಾರ್ ರಾಜೀವ್ ಗಾಂಧಿ ಹೌಸಿ ಕಾರ್ಪೋರೆಷನ್ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

ಈ ಹಿನ್ನಲೆಯಲ್ಲಿ ಅಧಿಕಾರಿಗಳು ಸತತ ತನಿಖೆ ನಡೆಸಿದ್ದು, ಜೊತೆಯಲ್ಲಿ ಖುದ್ದಾಗಿ ಪರಿಶೀಲನೆ ಮಾಡಿದ್ದು ಭಾಲ್ಕಿ ಪಟ್ಟಣದಲ್ಲಿ ಒಂದು ಮನೆ ತೋರಿಸಿ ಎರಡು ಮನೆಗಳ ಬಿಲ್‌ಗಳನ್ನು ಪಡೆದುಕೊಂಡಿದ್ದು,ಜೊತೆಗೆ ಅನರ್ಹ ಫಲಾನಿಭವಿಗಳಿಗೆ ಮನೆ ಹಂಚಿಕೆ ಮಾಡಿದ್ದು ಸಾಬೀತಾಗಿದೆ. ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾದ್ಯಕ್ಷರು ಸಹ ಸರಿಯಾಗಿ ಪರೀಶೀಲನೆ ಮಾಡದೆ ಮನೆ ಸುಳ್ಳು ಪಟ್ಟಿ ನೀಡಿದ್ದಾರೆ ಇದಕ್ಕೆ ಗ್ರಾಮಪಂಚಾಯತ್ ಅಧ್ಯಕ್ಷರು ಉಪಾದ್ಯಕ್ಷರು ಸಹ ಹೋಣೆಯಾಗಿದ್ದು, 203 ಫಲಾನುಭವಿಗಳಿಂದ ಬರೋಬ್ಬರಿ 79 ಕೋಟಿ ರೂಪಾಯಿ ಸರ್ಕಾರದ ಹಣ ದುರ್ಬಳಿಕೆಯಾಗಿದೆ. ದುರ್ಬಳಿಕೆಯಾದ ಹಣ ಕೂಡಲೆ ಗ್ರಾಮ ಪಂಚಾಯತ್ ಖಾತೆಗೆ ಜಮಾವಣೆ ಮಾಡುವಂತೆ ಸೂಚಿಸಲಾಗಿದೆ‌.

ಒಟ್ಟಿನಲ್ಲಿ ಭಾಲ್ಕಿ ತಾಲೂಕಿನ ಬಾಳೂರ ಪಿಡಿಓ ಸಂಗಮೇಶ್ ಸಾವಳೆ, ಬೀರಿ ( ಬಿ ) ಪಿಡಿಓ ಮಲ್ಲೇಶ್ ಮಾರುತಿ, ಜಾಂತಿ ಪಿಡಿಓ ರೇವಣಪ್ಪ, ಮೊರಂಬಿ ಪಿಡಿಓ ರೇಖಾ.ತಳವಾಡ ( ಕೆ ) ಪಿಡಿಓ ಚಂದ್ರಶೇಖರ್ ಗಂಗಶೆಟ್ಟಿ.ವರವಟ್ಟಿ ಪಿಡಿಓ ಸಂತೋಷ್ ಸ್ವಾಮಿ, ಎಣಕೂರು ಗ್ರಾಪಂಗಳ ಪಿಡಿಒ ಪ್ರವೀಣ್ ಕುಮಾರ್ ಮಹಾತ್ಮಕರ್ ಅವರನ್ನ ಅಮಾನತು ಗೊಳಿಸಿ ಆದೇಶಿಸಿದ್ದಾರೆ.

ಸದ್ಯ ಎಲ್ಲಾ ಪಿಡಿಓ ಗಳು ಬೇರೆ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರನ್ನು ಅಮಾನತು ಗೊಳಿಸಿ ಮುಂದಿನ ತನಿಖೆಯನ್ನ ಕೈಗೊಳ್ಳಲಾಗಿದೆ. ಒಟ್ಟಿನಲ್ಲಿ ಬಡವರಿಗೆ ಸೇರಬೇಕಾದ ಮನೆಗಳು ಅಧಿಕಾರಿಗಳು ಹಣದ ದಾಹಕ್ಕೆ ಉಳ್ಳವರಿಗೆ ಮನೆ ಹಂಚಿಕೆ ಮಾಡಿದ್ದು ಒಂದು ವಿಪರ್ಯಾಸವೆ ಸರಿ.ಆದರೆ ಅರ್ಹಫಲಾನುಭವಿಗಳು ಎಂದು ಸುಳ್ಳು ಮಾಹಿತಿ ನೀಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೇಲೆ ಕ್ರಮಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.