ಇನ್ಸ್ಪೆಕ್ಟರ್ ವಿರುದ್ಧ FIR – ಅದೇ ಕಚೇರಿಯಲ್ಲಿ ಕೆಲಸ ಮಾಡಿದ ಇನ್ಸ್ಪೆಕ್ಟರ್ ಮೇಲೆ ದಾಖಲಾಯಿತು ದೂರು

Suddi Sante Desk

ಬೆಂಗಳೂರು –

ಲಂಚ ಸ್ವೀಕರಿಸಿದವರ ವಿರುದ್ಧ ಆ ಪೊಲೀಸ್ ಅಧಿಕಾರಿ ದಾಳಿ ಮಾಡಿದ್ದ,ಲಂಚ ಮುಟ್ಟಿದ ಕೈಗಳನ್ನು ತೊಳೆದು ಜೈಲಿಗೆ ಕಳುಹಿಸಿದ್ದ.ಆದರೆ ಇದೀಗ ಅದೇ ಅಧಿಕಾರಿ ಹತ್ತು ಲಕ್ಷ ರೂಪಾಯಿ ಲಂಚ ಸ್ವೀಕರಿಸಿ ಎಸಿಬಿ ತನಿಖೆ ಎದುರಿಸುತ್ತಿದ್ದಾರೆ. ಅದೂ ಚೆಕ್ ಮೂಲಕವೂ ಲಂಚ ಪಡೆದಿರುವ ಆರೋಪಿತ ಅಧಿಕಾರಿ ವಿರುದ್ಧ ಎಸಿಬಿ ಪೊಲೀಸರು ಎಫ್ ಐಅರ್ ದಾಖಲಿಸಿದ್ದಾರೆ.

ಹೌದು.ಇಂದಿರಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಮೂರ್ತಿ. ಅಪರಾಧ ಪ್ರಕರಣದಲ್ಲಿ ಆರೋಪಿತ ವ್ಯಕ್ತಿಯಿಂದ ಹತ್ತು ಲಕ್ಷ ರೂಪಾಯಿ ಲಂಚ ಸ್ವೀಕರಿಸಿದ್ದಾರೆ.ಮೂರು ಲಕ್ಷ ರೂಪಾಯಿ ನಗದು ಪಡೆದರೆ, ಉಳಿದ ಮೊತ್ತ ಚೆಕ್ ಮೂಲಕವೇ ಪಡೆದಿದ್ದರಂತೆ. ಲಂಚ ನೀಡಿದ ವ್ಯಕ್ತಿ ಇದೀಗ ಎಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಸತ್ಯಾಸತ್ಯತೆ ಪರಿಶೀಲಿಸಿದ ಬಳಿಕ ಎಸಿಬಿ ಬೆಂಗಳೂರು ಘಟಕದ ಪೊಲೀಸರು FIR ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕೊರೋನಾ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಇಂದಿರಾನಗರ ಕ್ಲಬ್ ಗೆ ಪ್ರವೇಶ ಮಾಡಿದ್ದ ಕ್ಲಬ್ ಸದಸ್ಯ ರಾಮ್ ಮೋಹನ್. ರಾಮ್ ಮೋಹನ್ ಅವರನ್ನು ಸೆಕ್ಯುರಿಟಿ ಗಾರ್ಡ್ ತಡೆದಿದ್ದರು.ಗಾರ್ಡ್ ಗೆ ಕೊಲೆ ಬೆದರಿಕೆ ಹಾಕಿದ್ದ ರಾಮ್ ಮೋಹನ್. ರಾಮ್ ಮೋಹನ್ ವಿರುದ್ಧ ಇಂದಿರಾನಗರ ಠಾಣೆಗೆ ದೂರು ನೀಡಿದ್ದ ಕ್ಲಬ್ ಕಾರ್ಯದರ್ಶಿ ನಾಗೇಂದ್ರ. ಪ್ರಕರಣದಲ್ಲಿ ಬಿ ವರದಿ ಸಲ್ಲಿಸಲು ಹತ್ತು ಲಕ್ಷ ರೂಪಾಯಿ ಲಂಚನ್ನು ಇಂದಿರಾನಗರ ಪೊಲೀಸ್ ಇನ್ಸ್‌ಪೆಕ್ಟರ್ ರಾಮಮೂರ್ತಿ ಸ್ವೀಕರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತ ಸೂಕ್ತ ದಾಖಲೆಗಳ ಸಮೇತ ನಾಗೇಂದ್ರ ಎಂಬಾತ ಎಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನಾಧರಿಸಿ ಬೆಂಗಳೂರು ಎಸಿಬಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ತಿದ್ದುಪಡಿ ನಿಯಮದ ಪ್ರಕಾರ ಯಾವುದೇ ಲಂಚಕ್ಕೆ ಬೇಡಿಕೆ ಇಟ್ಟರೆ, ಬೇಡಿಕೆ ಇಟ್ಟಿದ ಮೂವತ್ತು ದಿನ ಒಳಗಾಗಿ ದೂರು ನೀಡಬೇಕು. ಆದರೆ ಇಲ್ಲದಿದ್ದರೆ ಆ ದೂರನ್ನು ಅಂಗೀಕರಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಆದರೆ ಇಂದಿರಾನಗರ ಕ್ಲಬ್ ಪ್ರಕರಣದಲ್ಲಿ ಈಗಾಗಲೇ ಲಂಚ ಸ್ವೀಕರಿಸಿ ದೋಷಾರೋಪ ಪಟ್ಡಿ ಕೂಡ ಹಾಕಲಾಗಿದೆ. ಇದೀಗ ದೂರು ನೀಡಿರುವುದು ಎಸಿಬಿ ತನಿಖೆಗೆ ತಾಂತ್ರಿಕ ತೊಡಕಾಗಬಹುದು.

ಪೊಲೀಸರ ಮೇಲೆ ಭ್ರಷ್ಟಾಚಾರ ಆರೋಪ ಸಹಜ. ಎಷ್ಟೋ ಪೊಲೀಸರು ಎಸಿಬಿ ಬಲೆಗೆ ಬಿದ್ದಿದ್ದಾರೆ.ಆದರೆ ಇನ್ಸ್‌ಪೆಕ್ಟರ್ ರಾಮಮೂರ್ತಿ ಎಸಿಬಿಯಲ್ಲಿ ಕೆಲ ಕಾಲ ಕಾರ್ಯ ನಿರ್ವಹಿಸಿದ್ದರು. ಭ್ರಷ್ಟಾಚಾರದಿಂದ ಜನರು ಎದುರಿಸುವ ಕಷ್ಟಗಳನ್ನು ಸಮೀಪದಿಂದ ನೋಡಿದ್ದರು. ಎಷ್ಟೋ ಭ್ರಷ್ಡರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸಿದ್ದರು. ಆದರೆ, ಇದೀಗ ಅವರೇ ಎಸಿಬಿ ತನಿಖೆಗೆ ಗುರಿಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.