ಮರದ ಪೊಟರೆಗಳಲ್ಲಿ ಗಿಡನೆಟ್ಟು ಹೊಸ ಪ್ರಯೋಗ – ಬಂಡೀಪುರ ಅರಣ್ಯ ಇಲಾಖೆ ಯಶಸ್ವಿ

Suddi Sante Desk

ಚಾಮರಾಜನಗರ:

ಅರಣ್ಯದಲ್ಲಿ ಒಣಗಿದ ದೊಡ್ಡ ಮರಗಳ ಪೊಟರೆಯೊಳಗೆ ಪಕ್ಷಿಗಳ ಹಿಕ್ಕೆಯಿಂದ ಬಿದ್ದ ಬೀಜಗಳಿಂದ ಹಸಿರು ಚಿಗುರೊಡೆಯುವುದು ಸಹಜ ಪ್ರಕ್ರಿಯೆ ಆದರೆ ಚಾಮರಾಜನಗರ ಜಿಲ್ಲೆಯ ಬಂಡೀಪುರದ ಅಭಯಾರಣ್ಯದಲ್ಲಿ ಕೃತಕವಾಗಿ ಪೊಟರೆಗಳಲ್ಲಿ ಬೀಜಗಳು ಬಿತ್ತನೆ ಮಾಡಿ ಯಶ್ವಸಿಗೊಂಡಿದ್ದಾರೆ.

ಸಸ್ಯಾಹಾರಿ ಪ್ರಾಣಿಗಳಿಗೆ ಮೇವಿಗೆ ಕೊರತೆಯಾಗಬಾರದು ಮತ್ತು ಸಾಯುವ ಹಂತದಲ್ಲಿರುವ ಮರಗಳು ಇರುವ ಸ್ಥಳದಲ್ಲೇ ಇನ್ನೊಂದು ಗಿಡವನ್ನು ಬೆಳೆಸಬೇಕು ಎಂಬದು ಈ ವಿನೂತನ ಯೋಜನೆಯ ಹಿಂದಿನ ಉದ್ದೇಶ.

ಒಣಗಿದ ಮರದ ಪೊಟರೆಗಳಲ್ಲಿ ಹತ್ತಿ, ಆಲದಮರ, ಮತ್ತಿ, ಗೋಣಿ, ಬಸುರಿ ಸೇರಿದಂತೆ ಪ್ರಾಣಿಗಳ ಮೇವಿಗೆ ಆಗುವ ಗಿಡಗಳನ್ನು ನೆಡುವ ಕಾರ್ಯ ಸಂರಕ್ಷಿತ ಪ್ರದೇಶದಾದ್ಯಂತ ಚಾಲ್ತಿಯಲ್ಲಿದೆ. ಬಂಡೀಪುರ ವ್ಯಾಪ್ತಿಯಲ್ಲಿ 13 ವಲಯಗಳಿದ್ದು ಕನಿಷ್ಠ 10 ಸಾವಿರ ಗಿಡಗಳನ್ನು ನೆಡುವ ಮೂಲಕ ಅಧಿಕಾರಿಗಳು ಯಶ್ವಸಿಯಾಗಿದ್ದಾರೆ.

ಒಂದು ವಲಯದಲ್ಲಿ ಗರಿಷ್ಠ 800ರಿಂದ 1000 ಗಿಡಗಳನ್ನು ಈ ವಿಧಾನದ ಮೂಲಕ ಬೆಳೆಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ.
ಕಾಡಿನಲ್ಲಿರುವ ಒಣಗಿದ ಮರಗಳು ಇರುವಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಗಿಡಗಳನ್ನು ನಿರಂತರವಾಗಿ ನೆಡಲಾಗುತ್ತದೆ. ನೆಟ್ಟ ಎಲ್ಲ ಸಸಿಗಳು ಬದುಕುವುದಿಲ್ಲ. ಪ್ರಾಣಿಗಳು ಹಾಳು ಮಾಡುತ್ತವೆ. ಸಣ್ಣ ಚಿಗುರುಗಳನ್ನು ತಿನ್ನುತ್ತವೆ. ಇದನ್ನು ತಪ್ಪಿಸುವ ಪ್ರಯತ್ನವಾಗಿ ಹೊಸ ಪ್ರಯೋಗ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಮರದ ಪೊಟರೆಗಳಲ್ಲಿ ಹೆಚ್ಚಿನ ನೀರಿನ ಅಂಶ ಇದ್ದರೆ ಗೊಬ್ಬರದ ಅವಶ್ಯಕತೆ ಇರುವುದಿಲ್ಲ. ಪೊಟರೆಗಳಲ್ಲಿ ಸಿಗುವ ಪೋಷಕಾಂಶಗಳ ಬಳಸಿಕೊಂಡೇ ಗಿಡಗಳು ಬೆಳೆಯುತ್ತವೆ .

ಕಾಳ್ಗಿಚ್ಚಿನ ಸಮಯದಲ್ಲಿ ಬೆಂಕಿ ಹರಡಿ ಕಾಡು ನಾಶವಾಗುವುದು ತಪ್ಪುತ್ತದೆ ಎಂಬ ದೃಷ್ಟಿಯಿಂದ ಎಲ್ಲ ವಲಯಗಳಲ್ಲಿ ಇರುವ ಒಣಗಿದ ಮರಗಳನ್ನು ಗುರುತಿಸಿ ಸಸಿ ನೆಡುವ ಮತ್ತು, ಬೀಜ ಬಿತ್ತನೆ ಮಾಡುವ ಪ್ರಯೋಗ ಮಾಡುತ್ತಿದ್ದೇವೆ ಈಗಾಗಲೇ ಬಹುತೇಕ ಕಡೆ ಇದು ಯಶ್ವಸಿಯಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.