ದಕ್ಷ ಪ್ರಾಮಾಣಿಕ ರಾಜ್ಯದ IAS ದಂಪತಿಗಳು ಕೇಂದ್ರ ಸೇವೆಗೆ – ಪತ್ನಿ ಬೆನ್ನಲ್ಲೇ ಪತಿ ಕೂಡಾ ಕೇಂದ್ರ ಸೇವೆಗೆ ವರ್ಗಾವಣೆ…..

Suddi Sante Desk
ದಕ್ಷ ಪ್ರಾಮಾಣಿಕ ರಾಜ್ಯದ IAS ದಂಪತಿಗಳು ಕೇಂದ್ರ ಸೇವೆಗೆ – ಪತ್ನಿ ಬೆನ್ನಲ್ಲೇ ಪತಿ ಕೂಡಾ ಕೇಂದ್ರ ಸೇವೆಗೆ ವರ್ಗಾವಣೆ…..

ಬೆಂಗಳೂರು

ದಕ್ಷತೆ, ಪ್ರಾಮಾಣಿಕತೆಗೆ ಹೆಸರಾದ ಕರ್ನಾಟಕದ ಐಎಎಸ್‌ ದಂಪತಿಗಳು ಕೇಂದ್ರ ಸೇವೆಗೆ ವರ್ಗಾವಣೆ ಯಾಗಿದ್ದಾರೆ ಹೌದು ದೆಹಲಿಯಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಿ ಆದೇಶವನ್ನು ಮಾಡಲಾಗಿದೆ
ಕಳೆದ ಎರಡು ದಶಕದಿಂದ ಕರ್ನಾಟಕದ ನಾನಾ ಕಡೆ ಗಳಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ ಐಎಎಸ್‌ ದಂಪತಿಗಳು ಕೇಂದ್ರ ಸೇವೆಗೆ ತೆರಳಿದ್ದಾರೆ,

ಎರಡು ತಿಂಗಳ ಹಿಂದೆಯೇ ದೆಹಲಿಗೆ ಐಎಎಸ್‌ ಅಧಿಕಾರಿ ಪತ್ನಿ ತೆರಳಿದ್ದರೆ, ಈಗ ಪತಿಯೂ ದೆಹಲಿಗೆ ವರ್ಗವಾಗಿದೆ.ಇದರೊಂದಿಗೆ ಮೂರು ತಿಂಗಳ ಹಿಂದೆ ಯಷ್ಟೇ ಐಎಫ್‌ಎಸ್‌ ದಂಪತಿ ಕೇಂದ್ರ ಸೇವೆಗೆ ಹೋಗಿದ್ದರು. ಇದರ ಬೆನ್ನಲ್ಲೇ ಐಎಎಸ್‌ ದಂಪತಿಯೂ ದೆಹಲಿಗೆ ಸ್ಥಳಾಂತರಗೊಂಡಿದ್ದಾರೆ.

ಯಾವುದೇ ಕೇಂದ್ರ ಸೇವೆಯ ಅಧಿಕಾರಿಗೆ ಅವರು ಬಯಸಿದ ರಾಜ್ಯದಲ್ಲಿ ಇಲ್ಲವೇ ಕೇಂದ್ರ ಸೇವೆಯಲ್ಲಿ ಐದು ವರ್ಷದವರೆಗೂ ಕೆಲಸ ಮಾಡಲು ಅವಕಾಶ ಇರುತ್ತದೆ. ಕೆಲವೊಮ್ಮೆ ಇದು ವಿಸ್ತರಣೆಯೂ ಆಗಬಹುದು.ಕರ್ನಾಟಕ ಕೇಡರ್‌ನ 2004 ನ ಬ್ಯಾಚ್‌ನ ಅಧಿಕಾರಿಗಳಾದ ಸಿ.ಶಿಖಾ ಹಾಗೂ ಡಾ.ಅಜಯ ನಾಗಭೂಷಣ್‌ ಕೇಂದ್ರ ಸೇವೆಗೆ ತೆರಳಿದವರು.

ಸಿ. ಶಿಖಾ ಅವರು ಎರಡು ತಿಂಗಳ ಹಿಂದೆಯೇ ದೆಹಲಿಗೆ ವರ್ಗಗೊಂಡಿದ್ದರು. ಕೆಲವು ಕಾರಣಗಳಿಂದ ಡಾ.ಅಜಯನಾಗಭೂಷಣ್‌ ಅವರು ದೆಹಲಿಗೆ ವರ್ಗಾವಣೆ ಆಗುವುದು ತಡವಾಗಿತ್ತು. ಅವರನ್ನೂ ಕರ್ನಾಟಕ ಸರ್ಕಾರವು ಕೇಂದ್ರ ಸೇವೆಗೆ ತೆರಳುವ ಕುರಿತು ಆದೇಶ ಹೊರಡಿಸಿದೆ.

ಸಿ.ಶಿಖಾ ಅವರು ಈಗಾಗಲೇ ಕೇಂದ್ರ ಆಹಾರ ಮತ್ತು ಸರಬರಾಜು ನಿಗಮದಲ್ಲಿ ಜಂಟಿ ಕಾರ್ಯದರ್ಶಿಯಾಗಿ ವರ್ಗಗೊಂಡಿದ್ದಾರೆ. ಡಾ.ಅಜಯನಾಗಭೂಷಣ್‌ ಅವರನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ನಿಯೋಜನೆ ಮಾಡ ಲಾಗಿದೆ.ಶಿಖಾ ಹಾಗೂ ಅಜಯನಾಗಭೂಷಣ್‌ ಅವರು ಕರ್ನಾಟಕದಲ್ಲಿ ಎರಡು ದಶಕದಿಂದ ಕೆಲಸ ಮಾಡುತ್ತಿ ರುವ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು.

ಇಬ್ಬರೂ ಬ್ಯಾಚ್‌ಮೆಟ್‌ಗಳು. ಧಾರವಾಡದಲ್ಲಿ ಕೆಲಸ ಮಾಡುವಾಗ ಪ್ರೀತಿಸಿ ವಿವಾಹವಾಗಿದ್ದರು. ಆನಂತರ ವಿವಿಧ ಕಡೆಗಳಲ್ಲಿ ಕೆಲಸ ಮಾಡಿದ್ದರು.ಶಿಖಾ ಅವರ ತಂದೆ ಚಂದ್ರಮೋಹನ್‌ ಅವರು ತಮಿಳುನಾಡು ಕೇಡರ್‌ನ ಐಪಿಎಸ್‌ ಅಧಿಕಾರಿಯಾಗಿದ್ದರು. ಎಂಜಿನಿಯರಿಂಗ್ ಮುಗಿಸಿದ ಶಿಖಾ ಅವರು ಐಎಎಸ್‌ ಅಧಿಕಾರಿಯಾಗಬೇಕು ಎಂಬ ಹಂಬಲದೊಂದಿಗೆ ಆನಂತರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕರ್ನಾಟಕಕ್ಕೆ ಬಂದವರು.

ಗದಗ ಎಸಿ, ಧಾರವಾಡ ಜಿಪಂ ಸಿಇಒ, ಗದಗ ಡಿಸಿ, ಮೈಸೂರು ಚಾಮುಂಡೇಶ್ವರಿ ವಿದ್ಯುತ್‌ ನಿಗಮದ ಎಂಡಿ, ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ, ಮೈಸೂರು ಡಿಸಿಯಾಗಿ ಕೆಲಸ ಮಾಡಿದವರು. ಆನಂತರ ಬೆಂಗಳೂರಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಆಯುಕ್ತೆ, ಬಿಎಂಟಿಸಿ ಎಂಡಿ, ವಾಣಿಜ್ಯ ಮತ್ತು ತೆರಿಗೆ ಇಲಾಖೆ ಆಯುಕ್ತರಾಗಿದ್ದರು.

ಮೈಸೂರು ಡಿಸಿಯಾಗಿದ್ದಾಗಲೇ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಮರಿಗೌಡ ಕೆಟ್ಟದಾಗಿ ನಡೆದುಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎನ್ನುವ ಕಾರಣಕ್ಕೆ ದೂರು ದಾಖಲಿಸಿದ್ದರು. ಧಾರವಾಡ ಜಿಪಂ ಸಿಇಒ ಆಗಿದ್ದಾಗ ನರೇಗಾ ಯೋಜನೆಯ ಜಾರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿಯೂ ಅವರಿಗೆ ಬಂದಿತು.

ಪಿಯು ಇಲಾಖೆಯಲ್ಲಿ ಪರೀಕ್ಷಾ ಅವ್ಯವಸ್ಥೆ ಸುಧಾರಣೆಗೆ ಶಿಖಾ ಶ್ರಮಿಸಿದ್ದರು. ವಾಣಿಜ್ಯ ಮತ್ತು ತೆರಿಗೆ ಇಲಾಖೆ ಯಲ್ಲಿ ಸುಮಾರು ಮೂರು ವರ್ಷ ಕೆಲಸ ಮಾಡಿದ್ದರು. ತೆರಿಗೆ ಸೋರಿಕೆ ತಡೆಗಟ್ಟಿ. ಆದಾಯ ಸಂಗ್ರಹ ನಿಗ್ರಹಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಕರ್ನಾಟಕ ಜಿಎಸ್ಟಿಯಲ್ಲಿ ನಂಬರ್‌ ಒನ್‌ ರಾಜ್ಯವಾಗಿತ್ತು.

ಡಾ.ಅಜಯನಾಗಭೂಷಣ್‌ ಅವರು ಮೂಲತಃ ತುಮಕೂರು ಜಿಲ್ಲೆ ಮಧುಗಿರಿಯವರು. ಎಂಬಿಬಿಎಸ್‌ ಪದವೀಧರರಾಗಿ ನಂತರ ಐಎಎಸ್‌ ತೇರ್ಗಡೆ ಹೊಂದಿ ಕರ್ನಾಟಕ ಸೇವೆಗೆ ಬಂದವರು. ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಆಯುಕ್ತ, ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಒ, ಮೈಸೂರು ಜಿಲ್ಲಾ ಪಂಚಾಯಿತಿ ಸಿಇಒ, ಮಂಡ್ಯ ಡಿಸಿಯಾಗಿ ಕೆಲಸ ಮಾಡಿದವರು.

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾಗಿ ಒಂದು ಸಾವಿರಕ್ಕೂ ಅಧಿಕ ಅಧ್ಯಾಪಕರ ಹುದ್ದೆಗಳನ್ನು ವಿವಾದಕ್ಕೆ ಎಡೆ ಮಾಡದೇ ನೇಮಕ ಮಾಡಿದ್ದರು. ನಗರಾಭಿವೃದ್ದಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
ಈ ಹಿಂದೆ ಹಲವು ದಂಪತಿಗಳು ಕೇಂದ್ರ ಸೇವೆಯಲ್ಲಿ ಕೆಲಸ ಮಾಡಿ ಕರ್ನಾಟಕಕ್ಕೆ ವಾಪಾಸ್‌ ಬಂದ ಉದಾಹರಣೆಯಿದೆ.

ಕೆಲವರು ಅವಧಿ ವಿಸ್ತರಣೆ ಪಡೆದು ಅಲ್ಲಿಯೇ ಉಳಿದಿದ್ದೂ ಇದೆ. ಕಾರ್ಯದರ್ಶಿ ಹಂತದಲ್ಲಿ ಐಎಎಸ್‌ ಅಧಿಕಾರಿಗಳಿಗೆ ಸವಾಲಿನ ಕೆಲಸ ಕಡಿಮೆ ಎನ್ನುವ ಕಾರಣದ ಜತೆಗೆ ಕೇಂದ್ರದಲ್ಲೂ ಕೆಲಸ ಮಾಡಿದರೆ ಅನುಭವ ಸಿಗಲಿದೆ ಎನ್ನುವ ಕಾರಣದಿಂದ ಹೆಚ್ಚಿನ ಅಧಿಕಾರಿಗಳು ಈ ಆಯ್ಕೆ ಮಾಡಿಕೊಳ್ಳುತ್ತಾರೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.