ಧಾರವಾಡ – ಯೋಗಿಶಗೌಡ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಎರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿದೆ. ಸಿಬಿಐನಿಂದ ಬಂಧನವಾಗಿ ನಿನ್ನೆ ಅಷ್ಟೇ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಚಂದ್ರಶೇಖರ ಇಂಡಿ ಅವರನ್ನು ಸಿಬಿಐ ವಶಕ್ಕೆ ನ್ಯಾಯಾಲಯ ನೀಡಿದೆ. ಎರಡು ದಿನ ಸಿಬಿಐ ಕಸ್ಟಡಿಗೆ ನೀಡಿ ಧಾರವಾಡ ಮೂರನೇ ಹೆಚ್ಚವರಿ ಸೆಷನ್ಸ್ ನ್ಯಾಯಲಯ ಆದೇಶ ಹೊರಡಿಸಿದೆ.

ಕಳೆದ ಡಿಸೆಂಬರ್ 13 ರಂದು ಸಿಬಿಐ ಅಧಿಕಾರಿಗಳು ಅಕ್ರಮ ಶಸ್ತ್ರಾಸ್ತ್ರ ಸಾಗಟ ಆರೋಪದ ಮೇಲೆ ಚಂದ್ರಶೇಖರ ಇಂಡಿ ಅವರನ್ನು ವಿಜಯಪುರದಲ್ಲಿ ಬಂಧನ ಮಾಡಿದ್ದರು. ಬಳಿಕ ಅಂದೇ ತಡ ರಾತ್ರಿ ಅವರನ್ನು ಧಾರವಾಡ ಉಪನಗರ ಠಾಣೆಗೆ ಕರೆದುಕೊಂಡು ಬಂದಿದ್ದರು. ಅಲ್ಲದೆ ಡಿಸೆಂಬರ್ 14 ರಂದು ಹಲವು ಗಂಟೆಗಳ ಕಾಲ ಸಿಬಿಐ ಅಧಿಕಾರಿಗಳು ಚಂದ್ರಶೇಖರ ಇಂಡಿವರನ್ನು ವಿಚಾರಣೆ ನಡೆಸಿದರು. ಬಳಿಕ ಮಧ್ಯಾಹ್ನದ ನಂತರ ಇವರನ್ನು ಧಾರವಾಡ ಜಿಲ್ಲಾ ನ್ಯಾಯಾಲಯ ಸಂಕಿರ್ಣ ಆವರದಲ್ಲಿರುವ ಮೂರನೇ ಹೆಚ್ಚುವರಿ ಸೆಷನ್ ನ್ಯಾಯಾಲಯಕ್ಕೆ ಹಾಜರು ಮಾಡಲಾಗಿತ್ತು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೋರಡಿಸಿದರು.

ಒಂದು ರಾತ್ರಿ ಕಳೆದು ಸಂಜೆಯಾಗುತ್ತಲೆ ಮತ್ತೆ ಇಂದು ಇಂಡಿಯವರನ್ನು, ಸಿಬಿಐ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ಕಸ್ಟಡಿ ಕೇಳಿರುವ ಕುರಿತು ವಿಚಾರಣೆ ಮಾಡಿದ ನ್ಯಾಯಾಧೀಶರು ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಆದೇಶ ಹೋರಡಿಸಿದ್ದಾರೆ. ಡಿಸೆಂಬರ್ 17 ಸಂಜೆ 5 ಗಂಟೆಯ ಒಳಗೆ ಇಂಡಿಯವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಲು ಸಿಬಿಐ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಈಗಾಗಲೇ ಚಂದ್ರಶೇಖರ ಇಂಡಿಯವರನ್ನು ಈ ಹಿಂದೆ ಹಲವು ಬಾರಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದು. ಬಂಧನದ ನಂತರ ಇದೇ ಮೊದಲ ಬಾರಿಗೆ ಕಸ್ಟಡಿಗೆ ಸಿಬಿಐ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಈಗ ಮತ್ತೆ ಎರಡು ದಿನ ಸಿಬಿಐ ತಂಡ ಚಂದ್ರಶೇಖರ ಇಂಡಿಯವರಿಗೆ ಡ್ರಿಲ್ ಮಾಡಲಿದ್ದು, ಪ್ರಮುಖವಾಗಿ ಅಕ್ರಮ ಶಸ್ತ್ರಾಸ್ತ್ರಗಳು ಕುರಿತು ವಿಚಾರಣೆ ನಡೆಸಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ರಮ ಶಸ್ತ್ರಾಸ್ತ್ರ ಗಳನ್ನು ಯಾವ ಉದೇಶದಿಂದ ಸಾಗಾಟ ಮಾಡಿದ್ದೀರಿ…? ಇದರ ಹಿಂದೆ ಇರುವ ಉದ್ದೇಶವೇನು..? ಯಾರು ಯಾವಾಗ ನಿಮ್ಮಗೆ ಇವುಗಳನ್ನು ತಲುಪಿಸಿದ್ದು…? ನೀವು ಯಾವ ರೀತಿಯಾಗಿ ಇವುಗಳನ್ನು ಧಾರವಾಡಕ್ಕೆ ತಲುಪಿಸಿದ್ದು..? ಯಾರ ಕೈಗೆ ಇವುಗಳನ್ನು ನೀಡಿದ್ದೀರಿ ..? ಎಂಬ ಪ್ರಶ್ನೆಗಳನ್ನು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಸೋದರ ಮಾವನಿಗೆ ಕೇಳಬಹುದು ಎನ್ನಲಾಗುತ್ತಿದೆ.