ಬೆಂಗಳೂರು –
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹುಕಾರ್, ಗೋಕಾಕ್ ಸಾಹುಕಾರ್, ಬೆಳಗಾವಿ ಸಾಹುಕಾರ್ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿರುವ ಕೆಲವು ನ್ಯೂಸ್ ಚಾನಲ್ ಗಳಿಗೆ ವಕೀಲರೊಬ್ಬರು ನೋಟೀಸ್ ನೀಡಿದ್ದಾರೆ. ಬೆಳಗಾವಿಯ 6 ಜನರ ಪರವಾಗಿ ವಕೀಲರೊಬ್ಬರು ನ್ಯೂಸ್ ಚಾನಲ್ ಗಳಿಗೆ ಈ ನೋಟೀಸ್ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಅವರ ಕುರಿತ ಸುದ್ದಿಗಳನ್ನು ಬಿತ್ತರಿಸುವಾಗ ಸಾಹುಕಾರ್, ಗೋಕಾಕ ಸಾಹುಕಾರ್ ಎಂದು ಸಂಬೋಧಿಸಿ, ವೈಭವೀಕರಿಸುತ್ತಿರುವುದು ನಮ್ಮ ಮನಸ್ಸಿಗೆ ನೋವನ್ನುಂಟು ಮಾಡಿದೆ ನಾವ್ಯಾರೂ ಅವರಿಂದ ಸಾಲ ಪಡೆದಿಲ್ಲ. ಹಾಗಾಗಿ ಅವರು ಸಾಹುಕಾರ್ ಆಗಲು ಸಾಧ್ಯವಿಲ್ಲ. ಈ ರೀತಿ ಪದಗಳನ್ನು ವೈಭವೀಕರಿಸಿ ನಮ್ಮ ತೇಜೋವಧೆ ಮಾಡಲಾಗುತ್ತಿದೆ.ಹಾಗಾಗಿ ಸುದ್ದಿ ಪ್ರಸಾರದ ವೇಳೆ ಸಾಹುಕಾರ್ ಪದ ಬಳಕೆ ಅನವಶ್ಯಕ ಎಂದು ನೋಟೀಸ್ ನಲ್ಲಿ ವಿವರಿಸಲಾಗಿದೆ.ತಕ್ಷಣ ಇಂಥ ಪದಬಳಕೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಅಂತಹ ಚಾನಲ್ ಗಳ ವಿರುದ್ಧ ಕಾನೂನು ರೀತಿ ಕ್ರಮಕ್ಕೆ ಮುಂದಾಗುವುದಾಗಿ ನೋಟೀಸ್ ನಲ್ಲಿ ಎಚ್ಚರಿಸಲಾಗಿದೆ