ಚಾಮರಾಜನಗರ –
ಹೌದು ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಕೆಗೆ ಆಹಾರ ಸಾಮಾಗ್ರಿಗಳು ಸರಬರಾಜು ಮಾಡುವ ಮಾದರಿಯಲ್ಲಿ ಮೊಟ್ಟೆಗಳನ್ನು ಇಲಾಖೆ ಅಥವಾ ಖಾಸಗಿ ಏಜೆನ್ಸಿ ಮೂಲಕ ವಿತರಣೆ ಮಾಡಬೇಕು ಸೇರಿದಂತೆ ಹಲವು ಬೇಡಿಕೆ ಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಡಳಿತ ಭವನ ಮುಂಭಾಗ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಾದಪ್ಪ ನೇತೃತ್ವದಲ್ಲಿ ಸಮಾವೇಶ ಗೊಂಡ ಪದಾಧಿಕಾರಿಗಳು ಹಾಗೂ ಮುಖ್ಯ ಶಿಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಸಂಘದ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಿತರಿಸುವ ಮೊಟ್ಟೆಯ ದರ ಒಂದಕ್ಕೆ ₹ 8ಕ್ಕೆ ಏರಿಕೆಯಾಗಿದೆ ಆದರೆ ಸರ್ಕಾರ ಶಾಲೆಗಳಿಗೆ ಬಿಡುಡಗೆ ಮಾಡುತ್ತಿರುವುದು ಕೇವಲ 5.20 ಮಾತ್ರ. ಹೆಚ್ಚುವರಿ 2.80 ಮೊತ್ತವನ್ನು ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಭರಿಸಬೇಕಾಗಿದೆ.
ಮಧ್ಯಾಹ್ನದ ಬಿಸಿ ಊಟ ಯೋಜನೆಯನ್ನು ಸಮರ್ಪಕ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಶಿಕ್ಷಣದ ಜೊತೆಗೆ ಬಿಸಿಯೂಟ ಯೋಜನೆಯ ನಿರ್ವಹಣೆಯ ಹೆಚ್ಚುವರಿ ಭಾರ ವನ್ನು ಹೊರಬೇಕಾದ ಪರಿಸ್ಥಿತಿ ಶಿಕ್ಷಕರಿಗೆ ಎದುರಾಗಿದ್ದ ಪಾಠ ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ. ಬಿಸಿಯೂಟ ಯೋಜನೆಗೆ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡುವ ಮಾದರಿ ಯಲ್ಲಿ ಮೊಟ್ಟೆಗಳನ್ನು ಸರಬರಾಜು ಮಾಡಬೇಕು.
ಬೋಧನೇತರ ಚಟುವಟಿಕೆಗಳಿಂದ ಶಿಕ್ಷಕರನ್ನು ಮುಕ್ತಗೊಳಿ ಸಿದರೆ ಮುಖ್ಯ ಶಿಕ್ಷಕರ ಮೇಲಿನ ಒತ್ತಡ ತಗ್ಗಲಿದೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಲಿದೆ. ಈ ವ್ಯವಸ್ಥೆ ಜಾರಿಯಾಗುವವರೆಗೂ ಮೊಟ್ಟೆ ಖರೀದಿಗೆ ಮಾರುಕಟ್ಟೆ ದರ ನೀಡಬೇಕು ಎಂದು ಒತ್ತಾಯಿಸಿದರು.ಮನವಿ ಸ್ವೀಕರಿಸಿದ ಸಿಇಒ ‘ಮುಖ್ಯ ಶಿಕ್ಷಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಇಲಾಖೆಯ ಮುಖ್ಯಸ್ಥರ ಸಭೆಯಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ಬಿಸಿಯೂಟ ಕಾರ್ಯಕ್ರಮದ ಜಿಲ್ಲಾ ಅಧಿಕಾರಿ ರೇವಣ್ಣ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾ, ತಾಲ್ಲೂಕು ಅಧ್ಯಕ್ಷರಾದ ಸಿ.ಕೆ. ರಾಮಸ್ವಾಮಿ, ಸೋಮಣ್ಣ, ಕಾರ್ಯದರ್ಶಿ ಮಲ್ಲಿಕಾರ್ಜುನ, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ.ಮಹದೇವ ಮೂರ್ತಿ, ಹಿರಿಯ ಉಪಾಧ್ಯಕ್ಷ ಎಂ.ಡಿ. ಮಹದೇವಯ್ಯ, ಕುಮಾರ್, ದಾಕ್ಷಾಯಿಣಿ, ಪದಾಧಿಕಾರಿಗಳಾದ ಸುಶೀಲಾ, ಶ್ವೇತಾ, ಕೃಷ್ಣಮೂರ್ತಿ, ನಟರಾಜು, ಧನಂಜಯ, ಪುಟ್ಟಸ್ವಾಮಿ ಇದ್ದರು.
ಅನಸೂಯಾ ಸುದ್ದಿ ಸಂತೆ ನ್ಯೂಸ್ ಚಾಮರಾಜನಗರ…..



