ಮಧ್ಯಪ್ರದೇಶ -
ಚರಂಡಿ ದಾಟಲು ವೃದ್ಧನ ಹೆಗಲೇರಿದ ಸರ್ಕಾರಿ ಅಧಿಕಾರಿ 65 ವರ್ಷದ ವ್ಯಕ್ತಿಯ ಬೆನ್ನೇರಿ ಚರಂಡಿ ದಾಟಿದ ಪಟ್ವಾರಿಗೆ ಗೇಟ್ಪಾಸ್ ನೀಡಿದ ಸರ್ಕಾರ ಹೌದು ಚರಂಡಿ ನೀರನ್ನು ದಾಟಲು ವೃದ್ಧನ ಬೆನ್ನೇರಿ ಕುಳಿತ ಕಂದಾಯ ಅಧಿಕಾರಿಯ ಅಮಾನವೀಯ ವರ್ತನೆಯ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಈ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆ ಅಧಿಕಾರಿಯನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ.ಜನಸೇವೆಯೇ ಜನಾರ್ದನ ಸೇವೆ ಎನ್ನಲಾಗುತ್ತದೆಆದರೆ ಅಧಿಕಾರದ ಮದ ತಲೆಗೇರಿದರೆ ಮನುಷ್ಯತ್ವ ಹೇಗೆ ಕಣ್ಮರೆಯಾ ಗುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ.
ಯಾಕಂದ್ರೆ, ಜನಾರ್ದನ ಅರ್ಥಾತ್ ಜನರ ಸೇವೆ ಮಾಡಲೆಂದು ವನ್ಯಜೀವಿಗಳ ದಾಳಿಯಿಂದ ಹಾನಿಗೊ ಳಗಾಗಿದ್ದ ಪ್ರದೇಶದ ಪರಿಶೀಲನೆಗೆ ಹೋದ ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಕಾಲು ಒದ್ದೆಯಾಗಬಾರದು ಎಂದು 65 ವರ್ಷದ ಹಿರಿಯ ಜೀವವೊಂದರ ಬೆನ್ನನ್ನೇ ವಾಹನ ಮಾಡಿಕೊಂಡಿದ್ದಾರೆ.
ಸಿಧಿ ಜಿಲ್ಲೆಯ ಕಂದಾಯ ಇಲಾಖೆಯ ಪಟವಾರಿ (ಕಂದಾಯ ಅಧಿಕಾರಿ) ನಿಲೇಶ್ ನಾಮದೇವ್ ಅವರು ಕಾಡು ಪ್ರಾಣಿಗಳಿಂದ ಹಾನಿಗೊಳಗಾಗಿದ್ದ ಮನೆ ಮತ್ತು ಜಮೀನಿನ ಸಮೀಕ್ಷೆ ನಡೆಸಲು ಮಾತಾ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ, ಸಂತ್ರಸ್ತ 65 ವರ್ಷದ ವೃದ್ಧ ಲಾಲ್ವಾ ಕೆವತ್ ಅವರ ಮನೆಗೆ ಹೋಗುವ ಮಾರ್ಗದಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ತುಂಬಿ ಹರಿಯುತ್ತಿತ್ತು. ಹಾಗಾಗಿ, ತನ್ನ ಬೂಟುಗಳು ಮತ್ತು ಬಟ್ಟೆಗಳು ಒದ್ದೆಯಾಗಬಾರದು ಎಂಬ ಕಾರಣಕ್ಕೆ, ತನಗೆ ನೀರು ದಾಟಿಸಿದರೆ ಮಾತ್ರ ಸಮೀಕ್ಷೆ ಮಾಡುವುದಾಗಿ ಅಧಿಕಾರಿ ವೃದ್ಧನಿಗೆ ಕಟ್ಟುನಿಟ್ಟಾಗಿ ಹೇಳಿದ್ದನೆನ್ನಲಾಗಿದೆ.
ಇನ್ನು, ಅಧಿಕಾರಿಯ ಮಾತಿಗೆ ಹೆದರಿದ ವೃದ್ಧ ಲಾಲ್ವಾ ಅವರು ಸುಮಾರು 45 ಸೆಕೆಂಡುಗಳ ಕಾಲ ಆ ಅಧಿಕಾರಿಯನ್ನು ತನ್ನ ಬೆನ್ನಿನ ಮೇಲೆ ಹೊತ್ತುಕೊಂಡು ಆ ಚರಂಡಿ ನೀರನ್ನು ದಾಟಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯ ನಿವಾಸಿಯೊಬ್ಬರು ಮೊಬೈಲ್ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡಿದ್ದು, ವಯಸ್ಸಾದ ವೃದ್ಧನ ಮೇಲೆಯೇ ಸವಾರಿ ಮಾಡಿದ ಅಧಿಕಾರಿಯ ಅಹಂಕಾರದ ವಿರುದ್ಧ ಸಾರ್ವಜನಿಕರು ಮತ್ತು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಎಚ್ಚೆತ್ತ ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿ, ಪಟವಾರಿ ನಿಲೇಶ್ ನಾಮದೇವ್ ನನ್ನು ಸೇವೆಯಿಂದ ತಕ್ಷಣವೇ ಅಮಾನತು ಮಾಡ ಲಾಗಿದೆ.
ಸುದ್ದಿ ಸಂತೆ ನ್ಯೂಸ್ ಮಧ್ಯಪ್ರದೇಶ.....