ಬೆಂಗಳೂರು –
ಮಾದರಿ ಶಾಲೆ ಮಾಡುವ ನೆಪದಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ 13,800 ಸರ್ಕಾರಿ ಶಾಲೆಗಳನ್ನು ಸರ್ಕಾರ ಮುಚ್ಚಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದ್ದು ಇದಕ್ಕೆ ಹಲವು ಕನ್ನಡ ಪರ ಮತ್ತು ವಿದ್ಯಾರ್ಥಿ ಸಂಘಟನೆಗಳು ವಿರೋಧ ವ್ಯಕ್ತಪಡಿ ಸಿವೆ.ಅಖಿಲ ಭಾರತ ಪ್ರಜಾಪ್ರಭುತ್ವ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಒ) ಮತ್ತು ಸಾಹಿತಿ ರಾ. ನಂ. ಚಂದ್ರಶೇಖರ್ ಸೇರಿ ಹಲವು ಕನ್ನಡಪರ ಹೋರಾಟಗಾರರು ಮತ್ತು ಚಿಂತಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದಲ್ಲಿ ಹೋಬಳಿಗೊಂದು ಮಾದರಿ ಸರ್ಕಾರಿ ಶಾಲೆ ಮಾಡಿ, ಸುತ್ತಮುತ್ತಲ ಪ್ರದೇಶದಲ್ಲಿನ ಮಕ್ಕಳನ್ನು ಸರ್ಕಾರದಿಂದಲೇ ವಾಹನ ಸೌಲಭ್ಯ ನೀಡಿ ಕರೆತರುವ ಯೋಜನೆ ರೂಪಿಸಲಾಗುತ್ತಿದೆ.ಸುತ್ತಮುತ್ತಲ ಹಳ್ಳಿಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಮಕ್ಕಳಿರುವ ಶಾಲೆಗಳ ಶಾಲಾ ಭಿವೃದ್ಧಿ ಸಮಿತಿಗಳು ಒಪ್ಪಿದರೆ ಆ ಶಾಲೆಯ ಮಕ್ಕಳನ್ನೂ ಮಾದರಿ ಶಾಲೆಗೆ ಕಳುಹಿಸಲು ಅವಕಾಶ ನೀಡಲು ಮುಂದಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದರು.
ಇದು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಿ ಅಗತ್ಯ ಶಿಕ್ಷಕರನ್ನು ನಿಯೋಜಿಸಿ ಗುಣ ಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಆದರೆ, ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮಾದರಿ ಶಾಲೆಗಳೊಂ ದಿಗೆ ವಿಲೀನಗೊಳಿಸಿದರೆ ಮಕ್ಕಳಿಲ್ಲದ ಶಾಲೆಗಳು ತಾನಾ ಗಿಯೇ ಮುಚ್ಚಿಹೋಗುತ್ತವೆ. ಮಾದರಿ ಶಾಲೆ ಆರಂಭಿಸಲಿ. ಆದರೆ ಸುತ್ತಮುತ್ತಲ ಶಾಲೆಗಳನ್ನು ಸರ್ಕಾರ ಹಾಗೇ ಉಳಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.