ಧಾರವಾಡ –
ರಾಜ್ಯ ಸರಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಮತ್ತೆ ಆರಂಭಗೊಂಡಿದ್ದು ಅಕ್ಟೋಬರ್ 16ರ ಶನಿವಾರದಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಧಾರವಾಡ ತಾಲೂಕಿನ ಕನಕೂರ ಗ್ರಾಮ ಪಂಚಾಯತ ವ್ಯಾಪ್ತಿಯ ವನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಹೌದು ಇಂದು ಆಯೋಜಿಸಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ,ಸ್ಥಳದಲ್ಲಿ ಪರಿಹರಿಸಲಿದ್ದಾರೆ.ಬೆಳಿಗ್ಗೆ 9-30 ಗಂಟೆಗೆ ಕಚೇರಿಯಿಂದ ಹೊರಡುವ ಅವರು ಕನಕೂರ ಗ್ರಾಮ ಪಂಚಾಯತಿ ವ್ಯಾಪ್ತಿ ಗ್ರಾಮಗಳಾದ ಕವಲಗೇರಿ,ಚಂದನಮಟ್ಟಿ,ಕನಕೂರ, ತಲವಾಯಿ ಗ್ರಾಮಗಳ ಮಾರ್ಗವಾಗಿ ಸುಮಾರು 10-30 ಗಂಟೆಗೆ ಹೊತ್ತಿಗೆ ವನಹಳ್ಳಿ ಗ್ರಾಮ ತಲುಪಲಿದ್ದಾರೆ.
ವನಹಳ್ಳಿಯಲ್ಲಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಿ ವಾದ್ಯ ಮೇಳದೊಂದಿಗೆ ಎತ್ತಿನ ಬಂಡಿಯಲ್ಲಿ ಗ್ರಾಮ ಪ್ರವೇಶ ಮಾಡಿಸಲಿದ್ದಾರೆ.
ನಂತರ ಜಿಲ್ಲಾಧಿಕಾರಿಗಳು ಎಸ್.ಸಿ,ಎಸ್.ಟಿ, ಕಾಲೋನಿ, ಅಂಗನವಾಡಿ ಕೇಂದ್ರ, ಪಡಿತರ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಲಿದ್ದಾರೆ.ವನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಅಹವಾಲು ಸ್ವೀಕಾರ ನಡೆಯಲಿದೆ.
ಕಂದಾಯ ಇಲಾಖೆ ಸಿಬ್ಬಂದಿಗಳು ಕನಕೂರ ಗ್ರಾಮ ಪಂಚಾಯತ ವ್ಯಾಪ್ತಿಯ ಐದು ಗ್ರಾಮಗಳ ಮನೆಮನೆಗೆ ಭೇಟಿ ನೀಡಿ,ಸಾರ್ವಜನಿಕರ ವಯಕ್ತಿಕ ಹಾಗೂ ಸಮುದಾಯ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಿ, ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಿ ದ್ದಾರೆ. ನಾಳೆಯೂ ಸಾರ್ವಜನಿಕರ ಅಹವಾಲು ಸ್ವೀಕರಿ ಸಲು ಎರಡು ಕೌಂಟರ್ ಗಳನ್ನು ತಾಲೂಕಾ ಆಡಳಿತ ತೆರೆಯಲಿದೆ.ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸರಕಾ ರದ ವಿವಿಧ ಇಲಾಖೆಗಳ ಸವಲತ್ತುಗಳನ್ನು ಅರ್ಹ ಪಲಾನು ಭವಿಗಳಿಗೆ ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ವಿತರಿಸಲಿದ್ದಾರೆ.ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ತಹಶಿಲ್ದಾರ ಡಾ.ಸಂತೋಷ ಬಿರಾದಾರ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.
ಇನ್ನೂ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಂತೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಆಯಾ ತಹಶಿಲ್ದಾರರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ.
ಅಕ್ಟೋಬರ್ 16 ಶನಿವಾರದಂದು ಹುಬ್ಬಳ್ಳಿ ಗ್ರಾಮೀಣ ತಹಶಿಲ್ದಾರ ಪ್ರಕಾಶ ನಾಶಿ,ತಾಲೂಕಿನ ಚನ್ನಾಪೂರ ಗ್ರಾಮದಲ್ಲಿ ಹುಬ್ಬಳ್ಳಿ ನಗರ ತಹಶಿಲ್ದಾರ ಶಶಿಧರ ಮಾಡ್ಯಾಳ ಉಣಕಲ್ ಗ್ರಾಮದಲ್ಲಿ, ಕುಂದಗೋಳ ತಹಶಿಲ್ದಾರ ಅಶೋಕ ಶಿಗ್ಗಾಂವಿ ತಾಲ್ಲೂಕಿನ ರಾಮಪೂರ ಗ್ರಾಮದಲ್ಲಿ, ನವಲಗುಂದ ತಹಶಿಲ್ದಾರ ನವೀನ ಹುಲ್ಲೂರ ತಾಲ್ಲೂಕಿನ ಪಡೆಸೂರ ಗ್ರಾಮದಲ್ಲಿ, ಅಣ್ಣಿಗೇರಿ ತಹಶಿಲ್ದಾರ ಮಂಜುನಾಥ ಅಮಾಸಿ ತಾಲ್ಲೂಕಿನ ಭಧ್ರಾಪೂರ ಗ್ರಾಮದಲ್ಲಿ,ಕಲಘಟಗಿ ತಹಶಿಲ್ದಾರ ಯಲ್ಲಪ್ಪ ಗೊಣ್ಣನ್ನವರ ತಾಲ್ಲೂಕಿನ ಅರೇಬಸವನಕೊಪ್ಪ ಗ್ರಾಮದಲ್ಲಿ ಹಾಗೂ ಅಳ್ನಾವರ ತಹಶಿಲ್ದಾರ ಮಾಧವ ಗಿತ್ತೆ ತಾಲ್ಲೂಕಿನ ಅಂಬೋಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಗ್ರಾಮ ವಾಸ್ತವ್ಯ ದಿನದಂದು ಆಯಾ ತಾಲ್ಲೂಕಿನ ತಹಶೀಲ್ದಾರರೊಂದಿಗೆ ಎಲ್ಲ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿದ್ದು ಸಾರ್ವಜನಿಕ ಅಹವಾಲು ಬೇಡಿಕೆಗಳಿಗೆ ಸ್ಥಳದಲ್ಲಿಯೇ ಕಾರ್ಯಸೂಚಿಗಳ ಅನ್ವಯ ಕ್ರಮಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಪರಿಹಾರ ನೀಡಲು ಕ್ರಮವಹಿಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶಿಸಿದ್ದಾರೆ.